ಆಕ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆಲ್ಲಾ ಈ ಬಾರಿ ದಸರಾಕ್ಕೆ ಬೋನಸ್. ನೀಡಿದವರು ಖ್ಯಾತ ಹರಿಕಥಾ ವಿದ್ವಾಂಸರಾದ ನರಸಿಂಹನ್ ಪ್ರತಿವಾದಿಯವರು.ಆಕ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆಲ್ಲಾ ಈ ಬಾರಿ ದಸರಾಕ್ಕೆ ಬೋನಸ್. ನೀಡಿದವರು ಖ್ಯಾತ ಹರಿಕಥಾ ವಿದ್ವಾಂಸರಾದ ನರಸಿಂಹನ್ ಪ್ರತಿವಾದಿಯವರು. ನರಸಿಂಹನ್ ಅವರು ಸುಮಾರು ನಾಲ್ಕು ದಶಕದಿಂದ ಅಮೇರಿಕದಲ್ಲಿ ನೆಲೆಸಿದ್ದು ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದಾರೆ. ಆದರೆ, ನಾಡು ನುಡಿಗಳ ಮೇಲಣ ಅಭಿಮಾನದ ಪ್ರೇರಣೆಯಿಂದ ಹರಿಕಥೆಯ ಕಲೆಯನ್ನು ಸ್ವಂತ ಪರಿಶ್ರಮದಿಂದ ರೂಢಿಸಿಕೊಂಡಿರುತ್ತಾರೆ. ಅಕ್ಟೋಬರ್ 1, ಭಾನುವಾರ ಸಂಜೆ ಆಕ್ಲೆಂಡಿನ ಮಹಾತ್ಮಾಗಾಂಧಿ ಕೇಂದ್ರದಲ್ಲಿ ನ್ಯೂಜಿಲೆಂಡ್ ಕನ್ನಡಕೂಟ ಆಯೋಜಿಸಿದ್ದ ಈ ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀಯುತರು ‘ಭೀಷ್ಮ ಪಿತಾಮಹ’ ವೃತ್ತಾಂತದ ಹರಿಕಥೆಯನ್ನು ನಡೆಸಿಕೊಟ್ಟರು.
ಮಹಾಭಾರತದ ಬಗ್ಗೆ ಆಳವಾದ ಜ್ಞಾನ , ಕನ್ನಡ ಭಾಷೆಯ ಪ್ರೌಢಿಮೆ, ಸಕಲರಿಗೂ ಅರ್ಥವಾಗುವಂತಹ ವಿವರಣೆ ಇವೆಲ್ಲವನ್ನೂ ಸಾಧಿಸಿರುವ ನರಸಿಂಹನ್ ಅವರು, ಸುಮಾರು ಎರಡು ಗಂಟೆಗಳ ಕಾಲ ನಡೆಸಿದ ಈ ಕಾರ್ಯಕ್ರಮ ನವರಾತ್ರಿಯ ಶುಭ ಸಮಯದಲ್ಲಿ ಕಿವಿಕನ್ನಡಿಗರ ಮನರಂಜನೆ ಹಾಗೂ ಮನೋವಿಕಾಸಗಳಿಗೆ ಕಾರಣವಾಯಿತು. ಭೀಷ್ಮರ ಕಥೆ ಮುಗಿಯುವ ಮುನ್ನ ಕೇಳುತ್ತಿದ್ದವರಿಗೆ ಸ್ವಯಂ ಭೀಷ್ಮ ಪಿತಾಮಹರೇ ನರಸಿಂಹನ್ ಅವರ ರೂಪದಲ್ಲಿ ಕುಳಿತು ತಮ್ಮ ಆತ್ಮ ಕಥೆ ನಿವೇದಿಸಿದಂತೆ ಭಾಸವಾಯಿತು.
ಹರಿಕಥೆಯ ನಂತರ ನರಸಿಂಹನ್ ಅವರು ಸಭಿಕರು ತೋರಿದ ಆಸಕ್ತಿ ಮತ್ತು ತನ್ಮಯರಾಗಿ ಆಲಿಸಿದ ಬಗೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ತಮ್ಮ ಮಾರ್ಗದರ್ಶಕರಾದ ಖ್ಯಾತ ಹರಿದಾಸ ವಿದ್ವಾಂಸ ಸಂತ ಭದ್ರಗಿರಿ ಅಚ್ಯುತದಾಸರನ್ನು ವಂದಿಸಿದರು.
ಕನ್ನಡ ಕೂಟದ ಅಧ್ಯಕ್ಷ್ಯ ಡಾ.ಲಿಂಗಪ್ಪ ಕಲ್ಬುರ್ಗಿ ಅವರು ಸ್ವಾಗತ ಭಾಷಣ ಮಾಡಿ, ಇತ್ತೀಚೆಗೆ ಕನ್ನಡ ನಾಡಿನಲ್ಲೇ ವಿರಳವಾಗುತ್ತಿರುವ ಹರಿಕಥೆಯ ಕಲೆಯನ್ನು ಪೋಷಿಸುತ್ತಿರುವ ನರಸಿಂಹನ್ ಅವರನ್ನು ವಂದಿಸಿದರು.
ವಿಶ್ವನಾಥ್, ಹರಿಕಥೆಯ ಬಗ್ಗೆ ವಿವರಣೆ ನೀಡಿದರು ಹಾಗೂ ರವಿರಾವ್ ಆಭಾರ ಮನ್ನಣೆ ಮಾಡಿದರು. ಕುಮಾರಿ ಅನುಪಮಾ ಪ್ರಭಾಕರ್ ಅವರ ಸ್ವಾಗತಗೀತೆಯಾಂದಿಗೆ ಆರಂಭವಾದ ಕಾರ್ಯಕ್ರಮವನ್ನು, ಕಾರ್ಯದರ್ಶಿ ಚಕ್ರಪಾಣಿ ನಿರೂಪಿಸಿದರು. ಕೀ ಬೋರ್ಡ್ ನಲ್ಲಿ ವಿದ್ವಾನ್ ಎಂ.ಡಿ.ದಿವಾಕರ್ ಮತ್ತು ತಬಲವಾದಕ ಪ್ರಜ್ಞ, ನರಸಿಂಹನ್ ಅವರಿಗೆ ವಾದ್ಯ ಸಂಗೀತದ ನೆರವು ನೀಡಿದರು. ಸತ್ಯನಾರಾಯಣ ಶೆಟ್ಟಿ ಅವರು ಧ್ವನಿ ಸಂಯೋಜನೆ ಉಸ್ತುವಾರಿ ನಿರ್ವಹಿಸಿದರು. ಹಬ್ಬದೂಟದ ಸಂತಸದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.